ಬೆಂಗಳೂರಿನ ದೇವನಹಳ್ಳಿ ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬರೋಬ್ಬರಿ 14.22 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ. ಕಳೆದ 18 ದಿನಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ವಿದೇಶಗಳಿಂದ ಅಕ್ರಮವಾಗಿ ಮಾದಕವಸ್ತು ಸಾಗಿಸುತ್ತಿದ್ದ 10 ಮಂದಿ ಪ್ರಯಾಣಿಕರನ್ನು ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ದೇವನಹಳ್ಳಿ, ನವೆಂಬರ್ 18: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೋರ್ಟ್ನಲ್ಲಿ (Kempegowda Airport) ಬರೋಬ್ಬರಿ 14 ಕೋಟಿ ರೂ ಮೌಲ್ಯದ ಮಾದಕ ವಸ್ತು ಜಪ್ತು ಮಾಡಲಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಕಳೆದ 18 ದಿನಗಳಿಂದ ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ಸಾಗಿಸುತ್ತಿದ್ದ 10 ಮಂದಿ ಪ್ರಯಾಣಿಕರನ್ನು ವಶಕ್ಕೆ ಪಡೆದಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಾಂಜಾ ಸಾಗಿಸುತ್ತಿದ್ದ 10 ಮಂದಿ ಪ್ರಯಾಣಿಕರು ಅಂದರ್
ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಳೆದ 18 ದಿನಗಳಲ್ಲಿ ನಡೆಸಿದ ತಪಾಸಣೆಯಲ್ಲಿ ಸುಮಾರು 14.22 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ಸ್ ಗಾಂಜಾ, ಇ-ಸಿಗರೇಟ್ ವಶಪಡಿಸಿಕೊಂಡಿದಾರೆ. ಪ್ರತ್ಯೇಕ ಪ್ರಕರಣಗಳಲ್ಲಿ ವಿದೇಶಗಳಿಂದ ಅಕ್ರಮವಾಗಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ 10 ಮಂದಿ ಪ್ರಯಾಣಿಕರನ್ನು ವಶಕ್ಕೆ ಪಡೆಯಲಾಗಿದೆ
ಅಧಿಕಾರಿಗಳ ಮಾಹಿತಿಯಂತೆ, ಬ್ಯಾಂಕಾಕ್ ಸೇರಿದಂತೆ ವಿದೇಶದ ಹಲವು ನಗರಗಳಿಂದ ಬಂದ ಪ್ರಯಾಣಿಕರು ತಮ್ಮ ಬ್ಯಾಗ್ಗಳಲ್ಲಿ 38.64 ಕೆ.ಜಿ ಹೈಡ್ರೋಪೋನಿಕ್ಸ್ ಗಾಂಜಾ, 2.38 ಲಕ್ಷ ರೂ. ಮೌಲ್ಯದ ವಿದೇಶಿ ಇ-ಸಿಗರೇಟ್ಗಳು ಹಾಗೂ ಎಂಟು ಬಗೆಯ ಅಪರೂಪದ ಜೀವಂತ ಪ್ರಾಣಿಗಳನ್ನು ಸಾಗಿಸುತ್ತಿದ್ದರೆಂದು ಗೊತ್ತಾಗಿದೆ. ಏರ್ಪೋರ್ಟ್ನ ಪ್ರಯಾಣಿಕರ ಚೆಕಿಂಗ್ ಸಂದರ್ಭದಲ್ಲಿ ಸಂಶಯಾಸ್ಪದ ಬ್ಯಾಗ್ಗಳನ್ನು ಸ್ಕ್ಯಾನಿಂಗ್ ಮಾಡಿದಾಗ ಈ ಅಕ್ರಮ ವಸ್ತುಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಕಸ್ಟಮ್ಸ್ ಅಧಿಕಾರಿಗಳು ಕಸ್ಟಮ್ಸ್ ಆಕ್ಟ್ ಮತ್ತು ಸಂಬಂಧಿತ ಕಾನೂನುಗಳಡಿ ಪ್ರಕರಣ ದಾಖಲಿಸಿ, ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಿಸಿಬಿ ದಾಳಿಯಲ್ಲಿ 7.70 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ
ಬೆಂಗಳೂರು ನಗರದಲ್ಲಿ ಸಿಸಿಬಿ ಮತ್ತು ಸ್ಥಳೀಯ ಪೊಲೀಸ್ ಠಾಣೆಗಳ ಸಂಯುಕ್ತ ಕಾರ್ಯಾಚರಣೆಯಲ್ಲಿ 7. 70 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, 14 ವಿದೇಶಿ ಪ್ರಜೆಗಳನ್ನು ಒಳಗೊಂಡಂತೆ 19 ಆರೋಪಿಗಳನ್ನು ಬಂಧಿಸಲಾಗಿದೆ. ಸುದ್ದುಗುಂಟೆಪಾಳ್ಯ, ಮಹದೇವಪುರ, ವರ್ತೂರು ಮತ್ತು ಕೆ.ಜಿ.ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ದಾಳಿಗಳಲ್ಲಿ ಒಟ್ಟು 4.904 ಕೆ.ಜಿ. ಡ್ರಗ್ಸ್ ಜಪ್ತಿ ಮಾಡಲಾಗಿದೆ.
ಸಿಸಿಬಿ ಪೊಲೀಸರು 1.52 ಕೋಟಿ ರೂ. ಮೌಲ್ಯದ 760 ಗ್ರಾಂ MDMA ಹಾಗೂ 4.08 ಲಕ್ಷ ರೂ.ಮೌಲ್ಯದ 2.44 ಕೆ.ಜಿ MDMA ವಶಪಡಿಸಿಕೊಂಡರೆ, ಕೆ.ಜಿ.ನಗರ ಪೊಲೀಸರು 1.5 ಕೆ.ಜಿ ಹೈಡ್ರೋ ಗಾಂಜಾ, ಮಹದೇವಪುರ ಪೊಲೀಸರು 600 ಗ್ರಾಂ ಹೈಡ್ರೋ ಗಾಂಜಾ ಸೀಜ್ ಮಾಡಿದ್ದಾರೆ. ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಅವರು ಶೀಘ್ರದಲ್ಲೇ ಈ ಕುರಿತು ಸುದ್ದಿಗೋಷ್ಟಿ ನಡೆಸಲಿದ್ದಾರೆ.
Have any thoughts?
Share your reaction or leave a quick response — we’d love to hear what you think!